ಕಳಚಿದ ನಡುತಿಟ್ಟಿನ ಸಾಂಪ್ರದಾಯದ ಕೊಂಡಿ, ಮೊಳಹಳ್ಳಿ ಹಿರಿಯ ನಾಯ್ಕ ಇನ್ನಿಲ್ಲ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಜನವರಿ 19 , 2015
|
ಸುಮಾರು ಅರುವತ್ತರ ದಶಕದಲ್ಲಿ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಆಳಿದ ಹಾರಾಡಿ-ಮಟ್ಪಾಡಿತಿಟ್ಟುಗಳ ಪ್ರಾತಿನಿಧಿಕ ಕಲಾವಿದ ಸುಮಾರು 60 ವರ್ಷ ಕಲಾಸೇವೆ ಮಾಡಿದ ಕಲಾವಿದ ಮೊಳಹಳ್ಳಿ ಹಿರಿಯ ನಾಯ್ಕರು ಇನ್ನಿಲ್ಲ. ಶರಣರ ಬದುಕನ್ನು ಮರಣದಲ್ಲಿ ನೋಡು ಎನ್ನುವ ಹಾಗೆ ಬಹಳ ಸುಖದ ಸಾವು ಅವರದ್ದು. 60ರ ದಶಕದಲ್ಲಿ ಬಡಗುತಿಟ್ಟು ಯಕ್ಷಗಾನದ ರಂಗಸ್ಥಳದ ರಾಜನೆಂದೇ ಖ್ಯಾತಿ ಹೊಂದಿದ್ದ ಹಿರಿಯ ಪುರುಷ ವೇಷಧಾರಿ ಮೊಳಹಳ್ಳಿ ಹಿರಿಯ ನಾಯ್ಕರು ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.
ಬಡಗುತಿಟ್ಟಿನ ಎರಡು ಪ್ರಮುಖ ಶೈಲಿಗಳಾದ ಹಾರಾಡಿ-ಮಟ್ಟಾಡಿ ಶೈಲಿಗಳೆರಡರಲ್ಲೂ ಪರಿಣತರಾಗಿದ್ದ ಮೊಳಹಳ್ಳಿ ಹೆರಿಯ ನಾಯ್ಕರು ತಮ್ಮ ಜೀವನದ ಹೆಚ್ಚಿನ ಅವಧಿಯಲ್ಲಿ ಮಂದರ್ತಿ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅಂತಿಮ ದಿನಗಳಲ್ಲಿ ಅವರು ಮಾರಣಕಟ್ಟೆ ಮೇಳದ ತಿರುಗಾಟದ ಕಲಾವಿದರಾಗಿದ್ದರು.
ಕುಂದಾಪುರ ತಾಲೂಕಿನ ಮೊಳಹಳ್ಳಿಯಲ್ಲಿ ಬಡ ಮೊಗವೀರ ಕುಟುಂಬದ ಚಿಕ್ಕ ನಾಯ್ಕ ಮತ್ತು ಮುತ್ತು ದಂಪತಿಗಳ ಪುತ್ರನಾಗಿ ಜನಿಸಿದ ನಾಯ್ಕರು ಗೆಜ್ಜೆ ಕಟ್ಟಿದಾಗ ಅವರಿಗೆ ಕೇವಲ ಹದಿನೈದು ವರ್ಷ ಪ್ರಾಯ. ಕಲಿಯುವ ಆಸೆ ಇದ್ದರೂ ಬಡತನದಿಂದ ಅವರ ಆಸೆ ನೆರವೇರಲಿಲ್ಲ. ಬಯಲಾಟ ಇದ್ದಲ್ಲಿಗೆ ಹೋಗಿ ರಾತ್ರಿ ನೆಡೆಯುವ ಆಟಕ್ಕೆ ಮನಸ್ಸನ್ನು ಒಪ್ಪಿಸಿ ಮರುದಿನ ಮೀನುಗಾರಿಕೆಯಲ್ಲೆ ತೊಡಗಿಕೊಳ್ಳುತಿದ್ದರು. ಯಕ್ಷಗಾನಕ್ಕೆ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡ ನಾಯ್ಕರು ಹಿರಿಯ ಬಾಗವತ ದಿ. ನಾರಯಣಪ್ಪ ಉಪ್ಪೂರಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡು ಅವರ ವಿಶ್ವಾಸಗಳಿಸಿ ತಾಳ, ಲಯ, ಹೆಜ್ಜೆಗಾರಿಕೆಯನ್ನು ಕಲಿತು ಕೇವಲ ನಾಲ್ಕಾಣೆ ಸಂಬಳಕ್ಕೆ ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದರು. ಯಕ್ಷಗಾನದಲ್ಲಿ ಮೇಲ್ದರ್ಜೆಗೇರಿದ ಎಷ್ಟೋ ಮಂದಿ ಕಲಾವಿದರ ಹಾಗೆ ಕೋಡಂಗಿಯಾಗಿ ರಂಗ ಪ್ರವೇಶ ಮಾಡಿದ ಇವರು ಖ್ಯಾತ ಪುರುಷ ವೇಷದಾರಿಯಾಗಿ ಹೊರ ಹೊಮ್ಮಿದ್ದು ಒಂದು ದಂತಕತೆ.
ಮಾರಣಕಟ್ಟೆ, ಪೆರ್ಡೂರು, ಕೊಲ್ಲೂರು, ಸಾಲಿಗ್ರಾಮ, ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು ಅತೀ ಹೆಚ್ಚು ಕಾಲ ತಿರುಗಾಟ ನಡೆಸಿದ್ದು ಬೋಜರಾಜ ಹೆಗ್ಡೆಯವರ ಮಂದಾರ್ತಿ ಮೇಳದಲ್ಲಿ. ಆಗ ಹೆಚ್ಚಿಗೆ ಹರಕೆ ಆಟ ಇಲ್ಲದ ಕಾಲದಲ್ಲಿ ಬಹುದೂರ ನಡೆದುಕೊಂಡು ಹೋಗಿ ಆಟ ಮಾಡಿ ಬರುವುದು ಸಾಮಾನ್ಯವಾಗಿತ್ತು. ಆ ಕಾಲದಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ ಹಾಗು ಹಾರಾಡಿ ಅಣ್ಣಪ್ಪ ಗಾಣಿಗರ ಹಿಮೇಳದಲ್ಲಿ ಕೋಡಿ ಶಂಕರ ಗಾಣಿಗರ ಎರಡನೆ ವೇಷ, ಹೆರಂಜಾಲು ಸುಬ್ಬಣ್ಣ ಗಾಣಿಗರ ಸ್ತ್ರೀವೇಷ, ಮಜ್ಜಿಗೆಬೈಲು ಆನಂದ ಶೆಟ್ಟರು ಮತ್ತು ನಾಯ್ಕರ ಪುರುಷಗಳು, ಜೊತೆ ವೇಷದಾರಿಗಳಾಗಿ ಶೃ೦ಗೇರಿ ಭಾಸ್ಕರ ಶೆಟ್ಟಿ ಮತ್ತು ಬೆಲ್ತೂರು ರಮೇಶನವರ ಕೂಡುವಿಕೆಯಿಂದ ಅಂದಿನ ಮಂದಾರ್ತಿ ಮೇಳ ಗಜಗಟ್ಟಿ ಮೇಳವೆಣಿಸಿತ್ತು.
|
|
|